ಮುಸುರಿ ಕೃಷ್ಣಮೂರ್ತಿ - ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟರಲ್ಲೊಬ್ಬರು. == ಜೀವನ == ಮಾರ್ಚ ೧೦, ೧೯೩೦ರಂದು ಮೈಸೂರು ಬಳಿಯ ಬೆಟ್ಟದಪುರದಲ್ಲಿ ಜನಿಸಿದ ಕೃಷ್ಣಮೂರ್ತಿಯವರು ಬಾಲ್ಯದಲ್ಲಿಯೇ ಅಭಿನಯ ಮತ್ತು ಹಾಡುಗಾರಿಕೆಯತ್ತ ಆಸಕ್ತರಾದರು. == ರಂಗಭೂಮಿ == ಕೃಷ್ಣಮೂರ್ತಿಯವರು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಇವರ ಅಭಿನಯವನ್ನು ಕಂಡ ಕಣಗಾಲ್ ಪ್ರಭಾಕರಶಾಸ್ತ್ರಿಯವರು ತಮ್ಮ ಚಾಮುಂಡೇಶ್ವರಿ ನಾಟಕ ಸಂಸ್ಥೆಯಲ್ಲಿ ಅವಕಾಶ ದೊರಕಿಸಿಕೊಟ್ಟರು. ಕೆಲಕಾಲದ ನಂತರ ಗುಬ್ಬಿ ವೀರಣ್ಣನವರ ನಾಟಕ ಕಂಪನಿಗೆ ಸೇರಿದರು. ನಂತರ ಹಿರಣ್ಣಯ್ಯನವರ ನಾಟಕ ಮಂಡಳಿಯೂ ಸೇರಿದಂತೆ ಹಲವಾರು ನಾಟಕ ಕಂಪನಿಗಳಲ್ಲಿ ರಂಗಕರ್ಮಿಯಾಗಿ ಕಲಾ ಪ್ರದರ್ಶನ ಮಾಡಿದರು. == ಚಿತ್ರರಂಗ == ಹಿರಣ್ಣಯ್ಯನವರ ನಾಟಕಮಂಡಳಿಯಲ್ಲಿದ್ದಾಗ, ಆ ಸಂಸ್ಥೆಯಡಿಯಲ್ಲಿ ಪಿಟೀಲು ಚೌಡಯ್ಯನವರ ನೇತೃತ್ವದಲ್ಲಿ ತಯಾರಾದ ವಾಣಿ ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. ಈ ಚಿತ್ರದ ಚಿತ್ರೀಕರಣದಲ್ಲಿ ಮುಸಿರಿ ಸುಬ್ರಹ್ಮಣ್ಯ ಅಯ್ಯರ್ ಅವರ ಸಂಗೀತ ಕಛೇರಿಯ ದೃಶ್ಯವೂ ಏರ್ಪಾಡಾಗಿತ್ತು. ಕಾರಣಾಂತರದಿಂದ ಸುಬ್ರಹ್ಮಣ್ಯ ಅಯ್ಯರ್ ಅವರು ಬರದೇ ಇದ್ದಾಗ, ಕೃಷ್ಣಮೂರ್ತಿಯವರೇ ಸಂಗೀತ ಕಛೇರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಹಿರಣ್ಣಯ್ಯನವರು ಆಗ ಕೃಷ್ಣಮೂರ್ತಿಯವರನ್ನು ಮುಸುರಿ ಕೃಷ್ಣಮೂರ್ತಿ ಎಂದು ಕರೆದರು, ಹಾಗು ಅದೇ ಹೆಸರು ಮುಂದೆ ಶಾಶ್ವತವಾಗುಳಿಯಿತು. ಸಿ.ವಿ.ರಾಜು ಅವರ ಬಳಿ ಸಂಕಲನ ಕೆಲಸವನ್ನೂ ಕಲಿತ ಮುಸುರಿ ಕೃಷ್ಣಮೂರ್ತಿ, ಅವರ ಬಳಿಯೇ ಸಹಾಯಕ ಸಂಕಲನಕಾರರಾಗಿ ಕೆಲವು ಚಿತ್ರಗಳಿಗೆ ಕಾರ್ಯನಿರ್ವಹಿಸಿದ್ದರು. ತಮ್ಮದೇ ಬಗೆಯ ವಿಶಿಷ್ಟ ಸಂಭಾಷಣೆಯಿಂದ ಹಾಸ್ಯಪಾತ್ರಗಳಲ್ಲಿ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸರು, ಮತ್ತು ನಂತರ ಖಳನಟನ ಪಾತ್ರಗಳಲ್ಲಿಯೂ, ಪೋಷಕನಟನ ಪಾತ್ರಗಳಲ್ಲಿಯೂ ಸುಮಾರು ೧೫೦ ಚಿತ್ರಗಳಲ್ಲಿ ಅಭಿನಯಿಸಿದರು. ೧೯೮೧ರಲ್ಲಿ ಶ್ರೀನಾಥ್, ಜಯಮಾಲಾ ಅಭಿನಯಿಸಿರುವ ನಂಬರ್ ಐದು ಎಕ್ಕ ಚಿತ್ರವನ್ನು ನಿರ್ಮಿಸಿ ನಿರ್ಮಾಪಕರಾಗಿದ್ದಾರೆ. == ಮುಸುರಿ ಕೃಷ್ಣಮೂರ್ತಿ ಅಭಿನಯದ ಪ್ರಮುಖ ಚಲನಚಿತ್ರಗಳು == ಪಡುವಾರಳ್ಳಿ ಪಾಂಡವರು ಧರ್ಮಸೆರೆ ಪಾವನಗಂಗಾ ಗುರು ಶಿಷ್ಯರು ಬಂಧನ ಹಾಲುಜೇನು ನಂಬರ್ ಐದು ಎಕ್ಕ ರಾಜ ಮಹಾರಾಜ ಬೆಂಕಿಯ ಬಲೆ ಕೆರಳಿದ ಹೆಣ್ಣು ಗಂಧರ್ವ ಗಿರಿ ಮುದುಡಿದ ತಾವರೆ ಅರಳಿತು ಚಲಿಸದ ಸಾಗರ ಮರ್ಯಾದೆ ಮಹಲ್ ಹುಲಿಯಾದ ಕಾಳ ನಾಗರ ಮಹಿಮೆ ಪೋಲಿಸ್ ಪಾಪಣ್ಣ ಪ್ರೇಮಜ್ಯೋತಿ ಬೆದರು ಬೊಂಬೆ ಆಶಾಕಿರಣ ಕರಿನಾಗ ಗಂಡಂದ್ರೆ ಗಂಡು ಬ೦ಗಾರದ ಜಿ೦ಕೆ == ನಿಧನ == ೫೫ನೇ ವಯಸ್ಸಿನಲ್ಲಿದ್ದ ಮುಸುರಿ ಕೃಷ್ಣಮೂರ್ತಿಯವರು ೧೯೮೫ರಲ್ಲಿ ಮರಣ ಹೊಂದಿದರು. ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರ ಪುತ್ರರು(ಗುರುದತ್ ಮುಸುರಿ, ಜಯಸಿಂಹ ಮುಸುರಿ) ತಮ್ಮ ತಂದೆಯ ಕುರಿತು ಚಾಣಕ್ಯ ಮುಸುರಿ ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ. == ಉಲ್ಲೇಖಗಳು ==